
ಮಣ್ಣಿನ ವಾಸನೆ, ಬೂಸಾ ವಾಸನೆ, ರಕ್ತದ ವಾಸನೆ ಎಲ್ಲವನ್ನೂ ಕನ್ನಡ ಸಾಹಿತ್ಯ ಅನುಭವಿಸಿದೆ. ದಮನಿತರ ಪಾದಗಳ ಅಡಿಯಿಂದ ಎದ್ದ ಧೂಳಿನ ವಾಸನೆಯೂ ಇಲ್ಲಿದೆ. ಬ್ರಾಂದಿ, ರಮ್ ವಾಸನೆಯಂತೂ ಬೀಚಿ, ಅನಕೃ ಕಾಲದಿಂದಲೇ ಇದೆ. ಇನ್ನು ಮಸಾಲೆ ದೋಸೆ ವಾಸನೆ ಕೂಡ ಮಾಸ್ತಿಯವರ ಗಾಂಬಜಾರಿನ ವಿದ್ಯಾರ್ಥಿಭವನದಿಂದ ನಾವು ಸೇವಿಸಿದ್ದೇವೆ. ಲಾಂಗು ಮಚ್ಚುಗಳಿಗೆ ಅಂಟಿಕೊಂಡ ರಕ್ತದ ವಾಸನೆಯಂತೂ ರವಿ ಬೆಳಗೆರೆ, ಅಗ್ನಿ ಶ್ರೀಧರ್ರ ಕೃತಿಗಳ ಮೂಲಕ ಪರಿಚಿತ.
ಮೊನ್ನೆ ಹೊಸದೊಂದು ವಾಸನೆಯ ಪರಿಚಯವಾಯ್ತು. ಅದು ಶಿವಾಜಿನಗರದ ಸ್ಮಶಾನದ ಬೂದಿ ವಾಸನೆ ಹಾಗೂ ಶಿವಾಜಿನಗರದ ಪುಡಿ ರೌಡಿಗಳ ಬೆವರಿನ ವಾಸನೆ. ಇದು ಅಗ್ನಿ ಶ್ರೀಧರ್ರ ಹೊಸ ಕೃತಿ ‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಬಿಡುಗಡೆ ವೇಳೆ ಕಂಡುಬಂದದ್ದು.
ಏಪ್ರಿಲ್ ೨೮ರಂದು ಸಂಜೆ ಬೇರೇನೂ ಕೆಲಸ ಇಲ್ಲವೆಂದು ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ಗೆ ಹೋಗಿದ್ದೆ. ಶ್ರೀಧರ್ ಪುಸ್ತಕ ಬಿಡುಗಡೆ, ಅಂಕಿತ ಪ್ರಕಾಶನ ಪ್ರಕಟಣೆ. ಈ ಅಂಕಿತದ ಪ್ರಕಾಶ್, ಜನಪ್ರಿಯ ಲೇಖಕರ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಾರೆ ಎಂಬ ಆರೋಪಗಳಿವೆ. ಇರಲಿ.
ಹೋಗಿ ನೋಡುತ್ತೇನೆ, ಎಂಜಿ ರೋಡಿನಲ್ಲಿ ಟ್ರಾಫಿಕ್ ಜಾಮ್ ಆದಂತೆ ಹಾಲ್ನ ಒಳಗೆ ಹೋಗುವ ಬಾಗಿಲು ಇಡಿಕಿರಿದುಬಿಟ್ಟಿದೆ. ತುಂಬಿದ ಹಾಲ್. ಬಸವನಗುಡಿಯ ಮಾಮೂಲಿ ಪ್ರೇಕ್ಷಕರು ಯಾರೂ ಕಾಣಿಸಲಿಲ್ಲ. ಹೆಚ್ಚಿನವರು ನೇರ ಶಿವಾಜಿನಗರದ ಮಾಂಸದ ಮಾರ್ಕೆಟ್ಗಳಿಂದ ಈಗ ತಾನೆ ಎದ್ದು ಬಂದವರಂತೆ ಇದ್ದರು. ಇರಲಿ, ಸಾಹಿತ್ಯವು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿರಬೇಕು ತಾನೆ !
ಮಾತು ಮಾತಿಗೂ ಚಪ್ಪಾಳೆ. ‘ಅಗ್ನಿ ಶ್ರೀಧರ್ ಮಹಾ ದಾರ್ಶನಿಕ ಲೇಖಕ’ ಅಂದರು ಮೊಗಳ್ಳಿ ಗಣೇಶ್. ಅವರ ದರ್ಶನ ಏನು ಎಂದು ನಮ್ಮಂಥ ಪಾಮರರಿಗೆ ಅರ್ಥ ಮಾಡಿಸಲು ಅವರಿಂದ ಸಾಧ್ಯವಾಗಲಿಲ್ಲ. ‘ಪಾಪಿಗಳ ಲೋಕ ಎಂಬುದೇನೂ ಬೇರೆ ಇಲ್ಲ. ಅವರೆಲ್ಲ ನಮ್ಮ ನಡುವೇ ಇರುತ್ತಾರೆ’ ಅಂದ್ರು ಬಂಜಗೆರೆ ಜಯಪ್ರಕಾಶ್. ನಿಜ, ಪಾಪಿಗಳು ಸಭೆಯ ನಡುವೆಯೂ ಇದ್ದರು, ವೇದಿಕೆಯ ಮೇಲೂ ಇದ್ದರು. ಶ್ರೀಧರ್ ಮಾತನಾಡಿದ ಬಳಿಕ ಎಲ್ಲ ಎದ್ದು ಹೊರಟೇಬಿಟ್ಟರು. ಅಧ್ಯಕ್ಷರಾಗಿದ್ದ ಚಂಪಾ ‘ನನ್ನ ಮಾತೂ ಸ್ವಲ್ಪು ಕೇಳೇ ಹೋಗ್ರೆಲಾ...’ ಎಂದು ಅಲವತ್ತುಕೋಬೇಕಾಯಿತು.
ಇರಲಿ, ಸಾಹಿತ್ಯ ಅಂದ ಮೇಲೆ ಎಲ್ಲವೂ ಇರಬೇಕು, ರೌಡಿಸಂ ಕೂಡ. ಬಸವನಗುಡಿಯ ಸಾಫ್ಟ್ ಜನ, ಸಾಹಿತಿಗಳ ರೌಡಿಸಂ ಮಾತ್ರ ಗೊತ್ತಿದ್ದವರು, ರೌಡಿಗಳ ಸಾಹಿತ್ಯವನ್ನೂ ಅರ್ಥ ಮಾಡಿಕೊಳ್ಳಲಿ ಬಿಡಿ, ತಪ್ಪೇನು ?

